ದೀಪಾವಳಿ ಹಾಗು ರಾಜ್ಯೋತ್ಸವ ಸಡಗರ ಅಮೇರಿಕಾದ ಕನೆಕ್ಟಿಕಟ್ ನಲ್ಲಿ .. ,
ಬಣ್ಣ ಬಣ್ಣದ ಉಡುಗೆ ತೊಟ್ಟು ಫ್ಯಾನ್ಸಿ ಡ್ರೆಸ್ ಶೋಗೆ ರೆಡಿಯಾಗಿ ನಿಂತಿರುವ ಚಿಣ್ಣರು, ಹಬ್ಬದ ಉಡುಗೆಯಲ್ಲಿ ಬಂದಿರುವ ಫೋಷಕರು , ಕಿವಿಗೆ ಕೇಳಿ ಬರುತ್ತಿರುವ ಇಂಪಾದ ಕನ್ನಡ ಗೀತೆಗಳು, ನೃತ್ಯಕ್ಕೆ ರೆಡಿಯಾಗುತ್ತಿರುವ ಮಕ್ಕಳು ...ಯಾವುದೋ ಚಿಣ್ಣರ ಲೋಕಕ್ಕೆ ಬಂದಂತೆ ಅನುಭವ ಆಗಿದ್ದು ಅಮೆರಿಕದಲ್ಲಿನ ಕನೆಕ್ಟಿಕಟ್ ಕನ್ನಡ ಕೂಟ ಏರ್ಪಡಿಸಿದ್ದ ದೀಪಾವಳಿ ಹಾಗು ರಾಜ್ಯೋತ್ಸವ ಸಡಗರ ೨೦೧೦ ದಲ್ಲಿ.
ಅಕ್ಟೋಬರ್ ಮುಗಿದು ನವೆಂಬರ್ ಬಂತೆಂದರೆ ಸಾಕು ..ಹಗಲು ಕಡಿಮೆ, ಇರುಳು ಜಾಸ್ತಿ ! ಚಳಿರಾಯನ ದರ್ಬಾರು ಆರಂಭವಾಗುವ ಈ ಸಮಯದಲ್ಲೂ ಸುಮಾರು ಇನ್ನೂರಕ್ಕೂ ಹೆಚ್ಚು ಹೊರನಾಡ ಕನ್ನಡಿಗರು ಕುಟುಂಬ ಸಮೇತರಾಗಿ ಬಂದಿದ್ದು ಕನ್ನಡಿಗರಿಗಿರುವ ಭಾಷಾಭಿಮಾನ , ಉತ್ಸುಕತೆ ಎದ್ದು ಕಾಣುತ್ತಿತ್ತು ಎಂದರೆ ಅತಿಶಯೋಕ್ತಿಯೇನಲ್ಲ !
ಪ್ರತಿ ವರ್ಷದಂತೆ ಈ ವರ್ಷವೂ ಜರುಗಿದ ಈ ಸಮಾರಂಭ ಸಮಯಕ್ಕೆ ಸರಿಯಾಗಿ " ಶ್ರೀ ಶರಣು ಸಿದ್ದಿ ವಿನಾಯಕ " ಸ್ತೋತ್ರದೊಂದಿಗೆ ಕನೆಕ್ಟಿಕಟ್ ನಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ತಾನದ ಹೊಸ ಆಡಿಟೋರಿಮ್ ನಲ್ಲಿ ನವೆಂಬರ್ ೧೩ ರಂದು ಪ್ರಾರಂಭವಾಯಿತು. ಕನ್ನಡ ಕೂಟದ ಅದ್ಯಕ್ಷರಾದ ಶ್ರೀನಿವಾಸ್ ಕೊಮ್ಮರಾಲರವರಿಂದ ಸ್ವಾಗತ ಆದಮೇಲೆ ಪುಟಾಣಿಗಳಿಂದ ವೇಷ-ವೈಖರಿ ...
ಮೈಸೂರ್ ಮಹಾರಾಜ , ಇಂದಿರಾಗಾಂಧಿ , ಜವಾಹರ್ಲಾಲ್ ನೆಹರು , ಮಹಾತ್ಮಾ ಗಾಂಧಿ , ಪ್ರಿನ್ಸೆಸ್ಸ್ ಡಯಾನ , ಸ್ವಾಮಿ ಶಂಕರಾನಂದ , ವಿಶ್ವೇಶ್ವರಯ್ಯ , ನಟಸಾರ್ವಭೌಮ ರಾಜ್ ಕುಮಾರ್ , ಶಂಕರನಾಗ್ , ರೋಬೋ ರಜನಿಕಾಂತ್ , ಕ್ರಿಕೆಟ್ ಮಾಂತ್ರಿಕ ಸಚಿನ್...ಈಗೆ ಹತ್ತು ಹಲವಾರು ವೇಷಗಳಲ್ಲಿ ಬಂದು ಚಿಣ್ಣರ ಲೋಕವನ್ನೇ ಸೃಷ್ಟಿಸಿದ್ದು ಅದ್ಭುತವಾಗಿತ್ತು .
ನಂತರ ಅನಿತಾ ಜೋಯಿಸ್ ರವರ ನೃತ್ಯ ನಿರ್ದೇಶನದಲ್ಲಿ ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯದ "ಅರಸು" ಚಿತ್ರದ "ನೋ ಟೆನ್ಶನ್" ಹಾಡಿಗೆ ಸರಿಯಾಗಿ ಹೆಜ್ಜೆ ಹಾಕಿದ್ದು ಎಲ್ಲ ಫೋಷಕರಿಗೆ ಖುಶಿ ಜೊತೆಗೆ ಟೆನ್ಶನ್ ದೂರಮಾಡಿದ್ದು ಎದ್ದು ಕಾಣುತ್ತಿತ್ತು!
ಭರತನಾಟ್ಯ , ನೀತಿಕತೆಯಾದ ಟೋಪಿ ಮಾರುವವ ಮತ್ತು ಮಂಗಗಳು ನಾಟಕ , ಕೊಳಲುವಾದನ , ನಗೆಹನಿ , ನಮ್ಮ ದಸರಾ ನಾಡಹಬ್ಬ , ಕನ್ನಡ ರಾಜ್ಯೋತ್ಸವ ಗೀತೆ ..ಈಗೆ ಹತ್ತು ಹಲವಾರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದೂರದೇಶದಲ್ಲಿರುವ ಕನ್ನಡಿಗರ ಮನಸೂರೆಗೊಂಡವು.
ಪ್ರಿಯಾ ಹರ್ಯಾಡಿಯವರ ನಿರ್ದೇಶನದಲ್ಲಿನಡೆದ "ಕರ್ನಾಟಕದ ಪ್ರಸಿದ್ದ ದೇಗುಲಗಳ ದರ್ಶನ" ಕಾರ್ಯಕ್ರಮ ಎಲ್ಲರಿಗು ನಮ್ಮ ಪ್ರಾಚೀನ ಪ್ರಸಿದ್ದ ದೇವಸ್ಥಾನಗಳ ಬಗ್ಗೆ ಕಿರುಪರಿಚಯ ಮಾಡಿಕೊಟ್ಟಿದ್ದಲ್ಲದೆ ನಮ್ಮೆಲ್ಲರಿಗೂ ಮತ್ತೊಮ್ಮೆ ಪ್ರತ್ಯಕ್ಷವಾಗಿ ಹೋಗಿಬಂದ ಅನುಭವವಾಯಿತು.
ಇದಾದ ನಂತರ ದೊಡ್ಡವರಿಂದ ನಗೆಹನಿ , ಜಲಲ ಜಲಲ ಧಾರೆ ನೃತ್ಯ , ಅರ್ಜುನ-ಬಬ್ರುವಾಹನ ಕಾಳಗದ ಸಂವಾದ , ಏಳುಮಲೆ ಮಹದೇಶ್ವರ ಜನಪದ ನೃತ್ಯಗಳು ಮನಸ್ಸಿಗೆ ಮುದ ನೀಡಿದವು. ಪ್ರತಿಭಾ ಪುರಸ್ಕಾರ ಸಮಾರಂಭದೊಂದಿಗೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದವು. ಈ ಬಾರಿ ಚಿಕ್ಕ ಮಕ್ಕಳೇ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದ್ದು ಆಕರ್ಷಕವಾಗಿತ್ತು!
ಕಾರ್ಯಕ್ರಮದ ಕೊನೆಗೆ ದೀಪಾವಳಿ ಹಬ್ಬದ ಭೂರಿ ಭೋಜನ ಮಾಡಿ , ಮೈಸೂರ್ ಪಾನ್ ಬೀಡಾ ಸೇವಿಸಿದ್ದು ನಮ್ಮೆಲ್ಲ ಕನ್ನಡಿಗರಿಗೆ ಹಬ್ಬದ ಸಂಭ್ರಮವನ್ನು ಉಂಟುಮಾಡಿತ್ತು!
ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಕನ್ನಡಕೂಟದ ವರ್ಗದವರಿಗೆ , ಎಲ್ಲಾ ಕನ್ನಡಿಗರಿಗೆ ಮತ್ತು ಪುಟಾಣಿಗಳಿಗೆ ಧನ್ಯವಾದಗಳು ! ಇದೇ ರೀತಿ ಇನ್ನೂ ಹೆಚ್ಚು ಹೆಚ್ಚಿನ ಕನ್ನಡ ಭಾಷೆಯ ಕಾರ್ಯಕ್ರಮಗಳು ಎಲ್ಲಾ ಕಡೆ ನಡೆಯಲಿ , ಕನ್ನಡದ ಕಂಪನ್ನು ಹರಡಲಿ ....
ಜೈ ಕನ್ನಡಾಂಬೆ !
-ನಾಗರಾಜ. ಎಂ